‘ಧರ್ಮ’ನಾಗಿ ಬದಲಾದ ‘ಶ್ರೀಮನ್ನಾರಾಯಣ’ ರಕ್ಷಿತ್ ಶೆಟ್ಟಿ! ಗೋವಾದಲ್ಲಿ ಬೀಡುಬಿಟ್ಟ ‘ಸಿಂಪಲ್ ಸ್ಟಾರ್’!

Date: February 7, 2020

In The News

ನಟ ರಕ್ಷಿತ್‌ ಶೆಟ್ಟಿ ನಟಿಸಿದ್ದ ಬಹುನಿರೀಕ್ಷಿತ ಚಿತ್ರ ‘ಅವನೇ ಶ್ರೀಮನ್ನಾರಾಯಣ‘ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಸದ್ಯ ಆ ಸಿನಿಮಾವೀಗ ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ನೋಡುಗರನ್ನು ರಂಜಿಸುತ್ತಿದೆ. ಅತ್ತ ರಕ್ಷಿತ್‌ ಶೆಟ್ಟಿ ‘777 ಚಾರ್ಲಿ‘ ಚಿತ್ರದ ಶೂಟಿಂಗ್ ಅನ್ನು ಶುರು ಮಾಡಿದ್ದರು. ಹಾಗಾದರೆ, ರಕ್ಷಿತ್ ಈಗ ಎಲ್ಲಿದ್ದಾರೆ? ಗೋವಾ ಎನ್ನುತ್ತಿದೆ ‘ಚಾರ್ಲಿ’ ಚಿತ್ರತಂಡ! ಹೌದು, ‘ಅವನೇ ಶ್ರೀಮನ್ನಾರಾಯಣ’ದಿಂದಾಗಿ ‘ಚಾರ್ಲಿ’ ಚಿತ್ರಕ್ಕೆ ಸಣ್ಣ ಬ್ರೇಕ್ ನೀಡಲಾಗಿತ್ತು. ಅದಕ್ಕೂ ಮೊದಲು ಬೆಂಗಳೂರು, ಮೈಸೂರು ಮುಂತಾದ ಕಡೆ ಶೇ.50 ಭಾಗ ಚಿತ್ರೀಕರಣ ಮಾಡಲಾಗಿತ್ತು. ಇದೀಗ ಚಿತ್ರೀಕರಣ ಮರುಚಾಲನೆ ನೀಡಲಾಗಿದೆ. ಅದಕ್ಕಾಗಿ ಗೋವಾದಲ್ಲಿ ಬೀಡುಬಿಟ್ಟಿದೆ ಇಡೀ ಚಿತ್ರತಂಡ. ಜತೆಗೆ ಚಿತ್ರದಲ್ಲಿ ಬಹುಮುಖ್ಯ ಪಾತ್ರ ಮಾಡುತ್ತಿರುವ ನಾಯಿ ಕೂಡ ಇದೆ. ರಕ್ಷಿತ್ ಮತ್ತು ನಾಯಿ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ಫೋಟೋವೊಂದು ಸಖತ್ ವೈರಲ್ ಆಗಿದೆ ಕೂಡ. ಇದೇ ಥರ ಬೈಕ್‌ ಸವಾರಿ ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೂ ಸಾಗಲಿದೆಯಂತೆ. ಈ ರೋಡ್‌ ಟ್ರಿಪ್‌ನಲ್ಲಿ ರಕ್ಷಿತ್ ಮತ್ತು ನಾಯಿ ಜೊತೆಗಿನ ಬಾಂಡಿಂಗ್ ಇನ್ನೂ ಹೆಚ್ಚಾಗುವ ದೃಶ್ಯಗಳು ಇರಲಿವೆಯಂತೆ. ಕಿರಣ್ ರಾಜ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ರಕ್ಷಿತ್ ಇದರ ನಿರ್ಮಾಪಕರು. ಈ ಸಿನಿಮಾದಲ್ಲಿ ರಕ್ಷಿತ್ ಹೆಸರು ಧರ್ಮ ಎಂದು ಇರಲಿದೆಯಂತೆ. ಅಂದಹಾಗೆ, ರಕ್ಷಿತ್ ಮಾಡೋ ಪ್ರತಿ ಸಿನಿಮಾಗಳಲ್ಲೂ ಅವರ ಪಾತ್ರಗಳ ಹೆಸರು ಖ್ಯಾತಿ ಪಡೆಯುತ್ತದೆ. ‘ಸಿಂಪಲ್ಲಾಗ್ ಒಂದು ಲವ್‌ಸ್ಟೋರಿ’ ಚಿತ್ರದಲ್ಲಿ ಖುಷ್‌ ಎಂದು ಇತ್ತು. ‘ರಿಕ್ಕಿ’ಯಲ್ಲಿ ರಿಕ್ಕಿ ಎಂಬುದೇ ಪಾತ್ರದ ಹೆಸರಾಗಿತ್ತು. ಇನ್ನು, ‘ಉಳಿದವರು ಕಂಡಂತೆ’ ಚಿತ್ರದಲ್ಲಿ ಅವರ ‘ರಿಚ್ಚಿ’ ಅನ್ನೋ ಹೆಸರು ಸಾಕಷ್ಟು ಜನಪ್ರಿಯಗೊಂಡಿತ್ತು. ‘ಕಿರಿಕ್‌ ಪಾರ್ಟಿ’ಯಲ್ಲಿ ಕರ್ಣನಾಗಿದ್ದರೆ, ‘ಅವನೇ ಶ್ರೀಮನ್ನಾರಾಯಣ’ದಲ್ಲಿ ನಾರಾಯಣ ಆಗಿದ್ದರು ರಕ್ಷಿತ್ ಶೆಟ್ಟಿ. ಈಗ ಧರ್ಮ ಪಾತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ.